September 13, 2025

ನಮ್ಮ ಪಾಲ ಅನ್ನ ನಮಗೆ ಕೊಡಿರೋ

ಜೂಡಿ ನ್ಯೂಸ್ :

[ ನ್ಯಾಯಮೂರ್ತಿ ಜಸ್ಟಿಸ್ ನಾಗಮೋಹನ್ ದಾಸ್ ಮೀಸಲಾತಿ ವರದಿಯಿಂದ ಅಲೆಮಾರಿ ಸಮುದಾಯವನ್ನು ಕೈಬಿಟ್ಟ ಸರಕಾರದ ನಡೆಯನ್ನು ವಿರೋಧಿಸಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಕೆರಳಿದ ಕವಿತೆ]

ನಮ್ಮ ಪಾಲ ಅನ್ನ ನಮಗೆ ಕೊಡಿರೋ

ರಾಮನು ನಾವೇ ಕಿಸ್ನಾನು ನಾವೇ

ಯುಧ್ದಾದಿ ಸತ್ತಾ ಬಿಷ್ಮಾನು ನಾವೇ

ಊರ ನುಂಗೋ ಮುಕ್ಕಣ್ಣನ ಯಾಸ

ಊರಾನು ಕಾಯೋ ಹನುಮಪ್ಪನ ದ್ಯಾಸ

ಬರಲಿಲ್ಲವೇನೋ ನಮ ದ್ಯಾಸ

ಮಾತಂಗಿ ಮಕ್ಕಳು ಗೋಸಂಗಿ ಕುಡಿಗಾಳು

ಸೆರಗ ಹಾಸ್ಯಾಗೆ ರಾಮಾಣ್ಯ

ಮಾಬಾರುತಪದ ಕಟ್ಟಿ ಹಾಡ್ಯಾವೋ

ಜಾಂಬವನ ಮೊಮ್ಮಕ್ಕಳ ಬಟ್ಟೆ ಹರಿದಾತೋ

ನಮ್ಮ ನವಿಲುಗರಿಗೀಟು ಜಾಗ ಕೊಡಿರೋ|

ಟಿಂಗ ಟಿಂಗ

ಟಿಂಗ ಟಿಂಗ

ಟಿಂಗ ಟಿಂಗ

ಟಿಂಗ ಟಿಂಗ

ನಮ್ಮ ಗುಡಿಸಾಲ ದೀಗಿ ಗಾಳಿಗೆ ವಾಲ್ಯಾತೋ

ಹೊಟ್ಟಿ ಮಾಟ ಸುಟುಗಂಡು ಹೋಗುವ ಮುನ್ನ ನೀವು

ಕೊಂಚ ಉಸಿರ ಆಡಲು ಜಾಗ ಕೊಡಿರೋ

ನೀವು ನೋಡಲೇ ಬೇಕೇನೋ ನೀವು ಕೇಳಾಲೇ ಬೇಕೇನೋ

ನೀವು ತಿರುಗಿ ಸಾಯಾಲು ಬೇಕೇನೋ

ಗರಗರನೇ ಗರಗರನೇ

ನತ್ತು ಉದುರಿಸಬ್ಯಾಡಿ ಕತ್ತು ಹಿಸುಕಲು ಬ್ಯಾಡಿ

ನಾವು ಹಾಡುವಾಗ ಗಂಟಾಲ ಕುಯ್ಯಬ್ಯಾಡಿ

ನಮ್ಮ ನವಿಲುಗರಿ ಯೋಟು ಅರಳಲು ಬಿಡಿರೋ|

ಈಟು ವರುಸಾತೋ ಈಟು ಜನುಮಾತೋ

ನಮಗ ಗುರುತಿಲ್ಲ ಕೂನಿಲ್ಲ ನಮ್ಮ ಭವಿಷ್ಯದ ಗಿಣಿ

ನಮ್ಮ ಹಣೆ ಬರಹ ಬರೆಯಾಕ ತಿಳಿದಿಲ್ಲೋ

ಇಂಕೊಂದು ಕನಸಿ ಕುಂತೀವಿ ಬಿಡಿರೋ

ನಾವು ನಮ್ಮ ಜಾತಕ ಬರಕಂತಿವಿ

ಕುಚ್ಚು ಮ್ಯಾಲಿನ ಗರಿ ಮರಿಯ ಹಕ್ಯಾವೋ

ಪೇಟಾದ ನೆರಿಗೆಗೆ ಗುರುತು ಮೂಡುವ ಹೊತ್ತು

ನಮ್ಮ ಪಾಲ ಅನ್ನ ನಮಗೆ ಕೊಡಿರೋ

ನಮ ಹಾಲ ಅನ್ನ ಜಗಕ ನಿದ್ಯೋ

ವಿಶಾಲ್ ಮ್ಯಾಸರ್