January 31, 2026

ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ನಿವಾಸಿಗಳ ಅರ್ಥಿಕಾಭಿವೃದ್ಧಿಗೆ ಆದ್ಯತೆ.

ಜೂಡಿ ನ್ಯೂಸ್ :

ಕಮಲಾಪುರ ಪಟ್ಟಣ ಅಭಿವೃದ್ದಿಗೆ 15 ಕೋಟಿ ರೂ ಅನುದಾನ ಬಿಡುಗಡೆ.

10 ಕೋಟಿ ರೂ ವೆಚ್ಚದಲ್ಲಿ ಪುಡ್‌ಕೋರ್ಟ್ ನಿರ್ಮಾಣಕ್ಕೆ ಶೀಘ್ರ ಕ್ರಮ.

ನೂತನ ಪುರಸಭೆ ಕಚೇರಿ ಲೋಕಾರ್ಪಣೆಗೊಳಿಸಿ ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿಕೆ.

ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ನಿವಾಸಿಗಳ ಅರ್ಥಿಕಾಭಿವೃದ್ಧಿಗೆ ಆದ್ಯತೆ

ವಿಜಯನಗರ(ಹೊಸಪೇಟೆ), ಅಕ್ಟೋಬರ್.10 : ಕಮಲಾಪುರ ಪಟ್ಟಣದ ಪುರಸಭೆ ವ್ಯಾಪ್ತಿಯ 21 ವಾರ್ಡ್ಗಳಿಗೆ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಗೆ 15 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿದರು.

ತಾಲೂಕಿನ ಕಮಲಾಪುರ ಪುರಸಭೆ ಆವರಣದಲ್ಲಿ ನೂತನವಾಗಿ 1.80 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಪುರಸಭೆ ಕಚೇರಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಶುಕ್ರವಾರ ಅವರು ಮಾತನಾಡಿದರು. ಕಮಲಾಪುರದ ಪ್ರತಿ ವಾರ್ಡ್ಗಳಲ್ಲಿ ಸಿಸಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಡಿ ಮಾಸಾಂತ್ಯದೊಳಗೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಮಲಾಪುರ ಪುರಸಭೆ ಸ್ಥಾಪನೆಗೆ ಹಾಗೂ ಅಭಿವೃದ್ಧಿಗೆ ಮಾಜಿ ಶಾಸಕರು ಬಹಳಷ್ಟು ಆದ್ಯತೆ ನೀಡಿದ್ದಾರೆ. ವಿಶ್ವವಿಖ್ಯಾತ ಪಾರಂಪರಿಕ ತಾಣವಾದ ಹಂಪಿ ವೀಕ್ಷಣೆಗೆ ಹೆಚ್ಚು ಪ್ರವಾಸಿಗರು ಆಗಮಿಸುವ ನಿಟ್ಟಿನಲ್ಲಿ ಕಮಲಾಪುರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಈ ಭಾಗದ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪುರಸಭೆಯ ಎಲ್ಲಾ ಜನಪ್ರತಿನಿಧಿಗಳು ಕಮಲಾಪುರದ ಅಗತ್ಯತೆಗಳ ಬಗ್ಗೆ ಕಾಳಜಿ ವಹಿಸಿದ್ದಾರೆ. ಕಮಲಾಪುರ ಬಸ್ ನಿಲ್ದಾಣದ ಅಭಿವೃದ್ಧಿಗೆ ಅನುದಾನ ಲಭ್ಯತೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿ ಸ್ಥಳೀಯ ನಿವಾಸಿಗಳಿಗೆ ಬದುಕು ಕಟ್ಟಿಕೊಳ್ಳಲು ಅವಕಾಶಗಳನ್ನು ಕಲ್ಪಿಸಬೇಕಿದೆ. ಹಳೇ ಬಸ್ ನಿಲ್ದಾಣ ಆವರಣದಲ್ಲಿ ಪುಡ್‌ಕೋರ್ಟ್ ನಿರ್ಮಾಣಕ್ಕೆ 10 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಆದರೆ ಹಂಪಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆಯಿಂದ ಕೆಲವು ಅನುಮತಿಗಳು ಸಿಗಬೇಕಿದೆ. ಶೀಘ್ರದಲ್ಲಿ ಚಾಲನೆ ನೀಡಲು ಕ್ರಮವಹಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಆರ್ಥಿಕ ಅಭಿವೃದ್ಧಿಗೆ ಹೊಟೇಲ್‌ಗಳು, ವ್ಯಾಪಾರ ಅಭಿವೃದ್ಧಿಗೆ ಅಗತ್ಯ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಮೂಲಸೌಕರ್ಯಗಳನ್ನು ಒದಗಿಸಬೇಕಿದೆ. ಸ್ಥಳೀಯ ಪುರಸಭೆ ಸದಸ್ಯರ ಜತೆಗೆ ನಮ್ಮ ಸಹಕಾರ ಸದಾ ಇರಲಿದೆ ಎಂದರು.

ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಮಾತನಾಡಿ, 2022-23ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ-4 ರಲ್ಲಿ ಮಂಜೂರಾದ ಕಮಲಾಪುರ ಪುರಸಭೆ ನೂತನ ಕಟ್ಟಡ ಕಚೇರಿ ನಿರ್ಮಾಣಕ್ಕೆ 1.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವುದು ಆಡಳಿತಾತ್ಮಕ ಕಾರ್ಯಗಳಿಗೆ ಸಹಕಾರಿಯಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಸ್ಥಳೀಯರ ಕುಂದುಕೊರತೆಗಳಿಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು. ನೂತನ ಪುರಸಭೆ ಕಚೇರಿ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತದಿಂದ ಅಭಿನಂಧನೆ ಸಲ್ಲಿಸಲಾಗುವುದು ಎಂದರು.

ಕಮಲಾಪುರ ನೂತನ ಪುರಸಭೆ ಕಚೇರಿ ಕಟ್ಟಡ ಲೋಕಾರ್ಪಣೆ ವೇಳೆ ಸಂಸದರಾದ ಈ.ತುಕಾರಾಮ್ ಹಾಗೂ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಮ್ ಉಪಸ್ಥಿತರಿದ್ದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಪುರಸಭೆ ಅಧ್ಯಕ್ಷೆ ಅಮೀನಾ, ಉಪಾಧ್ಯಕ್ಷ ಹೆಚ್.ಗೋಪಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯಕುಮಾರ್, ಸದಸ್ಯರಾದ ರಾಜ, ಸೈಯ್ಯದ್ ಅಮಾನುಲ್ಲಾ, ಜಿ.ಅನ್ವರ್, ಕೆ.ವಿ.ಸರಿತಾ, ಮುಕ್ತಿಯಾರ್ ಪಾಷ, ಪಿ.ರವಿಕುಮಾರ್, ಪಾರ್ವತಿ, ಪಾಲಯ್ಯ, ಬಿ.ಕಿಶೋರ್ ಕುಮಾರ, ಗೌಸಿಯಾ ಬೇಗಂ, ಮಮತಾ, ಈಶ್ವರಮ್ಮ, ಬೋರಮ್ಮ, ರಾಮಸ್ವಾಮಿ ಮಾಳಗಿ, ಎಂ.ಲಿAಗಪ್ಪ, ಎನ್.ಗಂಗಮ್ಮ, ಜ್ಯೋತಿಬಾಯಿ. ನಾಮನಿರ್ದೇಶಿತ ಸದಸ್ಯರಾದ ಕನ್ನೇಶ್ವರ, ಟಿ.ಚಾಂದ್ ಭಾಷ, ಜೆ.ಚೆನ್ನಪ್ಪ, ಎಂ.ಜAಬಯ್ಯ, ಕೆ.ಸೋಮಶೇಖರ್, ಮಾಜಿ ಅಧ್ಯಕ್ಷರಾದ ದೇಸಾಯಿ ಗೂಂಡುರಾವ್, ಜಿಲ್ಲಾ ಕೆಡಿಪಿ ಸದಸ್ಯರಾದ ಕಾಳಪ್ಪ, ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಎಂ.ಎಸ್.ಮನೋಹರ್, ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ಸೇರಿದಂತೆ ಪುರಸಭೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

*****